Tuesday, 3 November 2020

ಪೂಜನೀಯ ಮಾತೆಯ ಪರಿಸ್ಥಿತಿ 😰

ದೆಷ್ಟು ಸುಂದರ... ಯಾರ ಭಯವಿಲ್ಲದೇ ಸ್ವಚ್ಛಂದವಾಗಿ ಬೆಳೆದಿರುವ ಹಸಿರು ಹುಲ್ಲನ್ನು ಮೇಯುತ್ತಾ ಸಾಗುವ ಗೋವುಗಳ ಗುಂಪನ್ನು ನೋಡುವುದೇ ಆನಂದ. 

ಆದರೆ ಅದೇಕೋ ಅವೆಲ್ಲ ದೃಶ್ಯಗಳು ಅತಿ ಅಪರೂಪವೆನಿಸಿ ಬಿಟ್ಟಿವೆ.

ಸ್ವತಂತ್ರವಾಗಿ ವಿಹರಿಸಿ ಹಾದಿ-ಬೀದಿಯಲಿರುವ ಹುಲ್ಲನ್ನು ಮೇದು ಮನೆಗೆ ಬಂದು ಅಮೃತವನ್ನೀವೆ ಎಂಬ ವಾಕ್ಯವೂ ಹಾಡಿನಲ್ಲಷ್ಟೇ ಸೀಮಿತವಾಗಿ ಉಳಿದ್ಹೋಗಿದೆ. ಗೋಮಾಳಗಳಂತೂ ಸ್ವಾರ್ಥ ಬುದ್ಧಿಯ ಮನುಜನ ಆಪೋಶನಕ್ಕೊಳಪಟ್ಟು ವಿರಳಾತಿ ವಿರಳವಾಗಿದೆ. 

ಈ ಎಲ್ಲಾ ವಿಚಾರಗಳು ಮನದೊಳಗೆ ಹರಿದಾಡಲು ಆರಂಭಿಸಿದ್ದು... ಕಳೆದೆರಡು ದಿನದ ಹಿಂದೆ ನಾನು ಸಂಜೆ ಮನೆಯ ಕಡೆಗೆ ತೆರಳುತ್ತಿದ್ದ ಸಮಯವದು ; ಮಾರ್ಗ ಮಧ್ಯದಲ್ಲಿ ಕಂಡ ಗೋವುಗಳ ಸಣ್ಣ ಹಿಂಡೊಂದು ಮನಸಿಗೆ ಮುದವನ್ನೂ ನೀಡಿತ್ತು ಮತ್ತು ಅವುಗಳು ಜೊತೆಗೆ ಸಾಗುವುದನ್ನು ನೋಡಿ ಖುಷಿಯೂ ಆಗಿತ್ತು ಹಾಗು ಆ ಖುಷಿಯು ಮನಸಿಂದ ಮಾಸುವ ಮೊದಲೇ ಮನೆಯನ್ನೇನೋ ತಲುಪಿದೆ ಆದರೆ ಕಾಣದೇ ಮನವನು ಕೆಣಕಿದ ಕೆಲವು ವಿಚಾರಗಳಿನ್ನೂ ನನ್ನೊಳು ಹಾಗೇ ಉಳಿದಿತ್ತು.

ಈ ಕಾಣದೇ ಕಾಡಿರುವ ವಿಷಯಗಳ ಬಗ್ಗೆ ಕೆದಕುತ್ತಾ ಕುಳಿತಾಗ ಯೋಚನೆಗೆ ಬಂದದ್ದು.... "ಬದಲಾವಣೆ".

ನಾವೆಲ್ಲರೂ ಬದುಕಿನಲ್ಲಿ ಬದಲಾವಣೆಯನ್ನು ಬಯಸುತ್ತೇವೆ ಹಾಗೂ ನಮ್ಮ ಆಶೋತ್ತರಗಳಿಗೆ ಬೇಕಾದಂತೆ ಬದಲಾಗುತ್ತಿದ್ದೇವೆಯೂ ಕೂಡ.

ಹೌದು...ಕಾಲ ಬದಲಾಗಿದೆ ಅಲ್ವಾ?!.. ಆದರೆ ಅರೆಕ್ಷಣ ಯೋಚಿಸಿದಾಗ ಒಂದೊಮ್ಮೆ ಅನಿಸುತ್ತದೆ ಕಾಲವೇನು ಬದಲಾಗಿಲ್ಲ ಆದರೆ ನಾವಂತೂ ಖಂಡಿತ ಬದಲಾಗಿದ್ದೇವೆ ಹಾಗಾಗಿ ಎಲ್ಲವೂ ಬದಲಾಗಿದೆಯಷ್ಟೆ 🤷 

ಅದೇನೇ ಇರಲಿ ಸ್ವಾತಂತ್ರ್ಯ ಕಳೆದು ಸುಮಾರು 75 ವರ್ಷಗಳು ಸರಿದರೂ ಸಹ ಗೋವಿನ ಸ್ಥಿತಿ ಮಾತ್ರ ಇನ್ನು ಬದಲಾಗದೆ ಹಾಗೇ ಇದೆ. ಬ್ರಿಟಿಷರ ದಾಸ್ಯದ ಬದುಕಿನಿಂದ ನಾವೇನೋ ಹೊರಬಂದೆವು ಆದರೆ ಗೋವುಗಳು ಮಾತ್ರ ಇನ್ನೂ ಅದೇ ದುಸ್ಥಿತಿಯ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. 

ರಾಷ್ಟ್ರವು ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಏಳು - ಬೀಳುಗಳನ್ನು ದಾಟುತ್ತಾ ಪ್ರಗತಿಯನ್ನು ಕಂಡಿದೆ ಮತ್ತು ಕಾಣುತ್ತಲಿದೆ ಆದರೂ ಕೋಟಿ ಪಾಪಗಳ ಕಳೆವ ಪುಣ್ಯಕೋಟಿಯ ಕಷ್ಟ ಮಾತ್ರ ಕಳೆಯುತ್ತಿಲ್ಲ. 

ಅಭಿವೃದ್ಧಿಯ ಸೋಗಿನಲ್ಲಿ ಮೈಮರೆತಿರುವ ಮನುಜ ಕುಲವಿಂದು ತನ್ನೊಂದಿಗೆ ಇರುವ ಪ್ರಕೃತಿ ಹಾಗೂ ಗೋವಿನ ಕೂಗನ್ನು ಕೇಳಿಯೂ ಕೇಳದಾಗಿಹ ಕಿವುಡನಾಗಿ ಬಿಟ್ಟನು ಎಂದರೆ ತಪ್ಪಾಗಲಾರದು.


ಭಾರತದ ಇತಿಹಾಸದ ಪುಟಗಳನೊಮ್ಮೆ ತಿರುವಿ ಹಾಕಿದಾಗ ದೇಶದಲ್ಲಾದ ಬದಲಾವಣೆಗಳ ಮೈಲುಗಲ್ಲುಗಳನ್ನು ನೋಡುತ್ತಾ ಹೋದರೆ ನಿಜವಾಗಿಯೂ ಬದುಕು ಬರಡಾಗಿರುವುದು ಗೋವಿನದ್ದೇ.  

ವರುಷಗಳು ಉರುಳಿದಂತೆ... ಯಾರ ಭಯವಿಲ್ಲದೇ ಸ್ವಚ್ಛಂದವಾಗಿ ತಿರುಗಾಡುತ್ತಿದ್ದ ಸಾವಿರಾರು ಗೋವುಗಳು ನಿರ್ದಯವಾಗಿ ಸಾವಿನ ಮನೆಗೆ ಸಾಗಿಸಲ್ಪಡುವುದಲ್ಲದೇ ಅಲ್ಲಿಯೂ ಸಹ ವಿಕೃತ ರೀತಿಯಲ್ಲಿ ಜೀವ ಸಹಿತ ಹಸುಗಳ ಚರ್ಮ ಸುಲಿಯುವ ಮುಖಾಂತರ ಚರ್ಮ,ಮಾಂಸ, ದನದ ಕೊಬ್ಬು ಇತ್ಯಾದಿ ವಿಷಯಗಳಿಗಾಗಿ ಅವ್ಯಾಹತವಾಗಿ ಲಕ್ಷಕ್ಕೂ ಮಿಕ್ಕಿ ಗೋವುಗಳ ವಧೆ ನಡೆಯಿತು ಹಾಗೂ ಇಂದಿಗೂ ಸಹ ತಮ್ಮ ಸ್ವಾರ್ಥ ಲಾಭಕ್ಕಾಗಿ ಗೋವುಗಳನ್ನು ಕದಿಯುವುದು ಮತ್ತು ಮಾಂಸಕ್ಕಾಗಿ ಅಕ್ರಮವಾಗಿ ಸಾಗಿಸುವುದು ಮುಂದುವರೆಯುತ್ತಲೇ ಬಂದಿದೆ.

ಹಾಗಾದರೆ ಇಷ್ಟು ವರುಷಗಳು ಕಳೆದರೂ ಕೂಡ ಗೋವಿನ ಈ ಪರಿಸ್ಥಿತಿಯನ್ನು ಕೊನೆಗಾಣಿಸಲು ಬದಲಾವಣೆಗಳೇನು ನಡೆದಿಲ್ಲವೇ ಎಂದು ಯೋಚಿಸುತ್ತಿರಬಹುದು ಅಲ್ವೇ?!!...

ನಿಜ ...ಬದಲಾವಣೆಗಳೇನೋ ಬೇಕಾದಷ್ಟು ನಡೆದಿವೆ ಆದರೆ ಸ್ವಾತಂತ್ರ್ಯ ನಂತರ ಭಾರತದಲ್ಲಿರುವ ಜನಸಂಖ್ಯೆಯಲ್ಲಿ ಏರಿಕೆಯಾಯಿತೇ ವಿನಃ ಜೀವಮಾನವಿಡೀ ಹಾಲನ್ನೀಯುವ ಗೋವುಗಳ ಸಂಖ್ಯೆಯು ಏರಿಕೆಯಾಗಲೇ ಇಲ್ಲ. ಅದರ ನಂತರದ ದಿನಗಳಲ್ಲಿ ಬಂದ "ಶ್ವೇತ ಕ್ರಾಂತಿ"ಯಂತಹ ವಿಚಾರಗಳಿಂದ ಭಾರತದಿ ಪುನಃ ವಿದೇಶಿ ತಳಿಗಳೇ ಬಂದು ವ್ಯಾಪಿಸಿದವು ಬಿಟ್ಟರೆ... ಭಾರತೀಯ ತಳಿಗಳ ಸಂಖ್ಯೆ ಕ್ಷೀಣಿಸುತ್ತಲೇ ಬಂದವು. 

ಆದರೂ ದೇವರ ದಯೆ ಎಂಬಂತೆ... ಇನ್ನೂ ನಮ್ಮ ದೇಶದಲ್ಲಿರುವ ಗೋ ಪ್ರೇಮಿಗಳಿಂದ ಅಥವಾ ರೈತರಿಂದಾಗಿಯೋ... ಏನೋ ...ಸುಮಾರು 40 ರಿಂದ 43 ಭಾರತೀಯ ತಳಿಗಳು ಉಳಿದುಕೊಂಡವು.

1760 ರಿಂದ ಆರಂಭಿಸಿ ಇಂದಿನವರೆಗೂ ನಿರಂತಂರವಾಗಿ ಕಟುಕರ ಕೈ ಸೇರಿ ಹಿಂಸಾತ್ಮಕ ವೇದನೆಯನ್ನು ಅನುಭವಿಸಿ ಹತ್ಯೆಗೊಳಗಾಗುವ ಗೋವಿನ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳೂ ಅನೇಕ ನಡೆದರೂ ಕೆಲವು ಕಾರಣಗಳಿಂದ ಸಮರ್ಪಕವಾಗಿ ಗೋವಿನ ರಕ್ಷಣಾ ಕಾರ್ಯ ನಡೆಯುತ್ತಿಲ್ಲ ಹಾಗೂ ನಡೆಸಲು ಸಾಧ್ಯವಾಗುತ್ತಿಲ್ಲ.

ಆ ಕೆಲವು ಕಾರಣಗಳಲ್ಲಿ ಕಾನೂನು ಕೂಡ ಒಂದು. ಕೆಲವೊಂದು ಬಾರಿ ಕಾನೂನುಗಳು ಇದ್ದರೂ ಶಿಕ್ಷೆ ನೀಡುವ ಕಾರ್ಯ ನಡೆಯುತ್ತಿಲ್ಲ ಹಾಗೂ ಕೆಲವು ಸಲ ಶಿಕ್ಷೆ ನೀಡಲು ಬೇಕಾದ ಕಾನೂನೇ ಸರಿಯಾಗಿರುವುದಿಲ್ಲ. ಇವೆಲ್ಲವೂ ಸರಿಯಿದ್ದಾಗ ರಾಜತಾಂತ್ರಿಕತೆಯೇ ಸಹಕಾರಿಯಾಗಿರುವುದಿಲ್ಲ ಹಾಗೂ ಭಾರತೀಯ ಗೋತಳಿಗಳ ಸಂಪೂರ್ಣ ಸಂರಕ್ಷಣೆ, ಸಂಶೋಧನೆಗೆ ಅಷ್ಟಾಗಿ ಪ್ರೋತ್ಸಾಹವನ್ನೂ ನೀಡುತ್ತಿಲ್ಲ. ಅದುವೇ ನಮ್ಮ ದೇಶದ ವಾಸ್ತವ ಮತ್ತು ವಿಷಾದದ ಸಂಗತಿ. 

ಇದಕ್ಕೆ ತಾಜಾ ಉದಾಹರಣೆ ಎಂದರೆ ಪ್ರಸ್ತುತ ನಾವೀಗ ಏನು ಲೀಟರ್ ಗಟ್ಟಲೆ ಹಾಲನ್ನು ಹಾಲಿನ ಕೇಂದ್ರದಿಂದ ತಂದು ಬಳಸುತ್ತಿದ್ದೇವೆ ಅದು ಭಾರತೀಯ ಗೋ ತಳಿಗಳ ಹಾಲಲ್ಲ. ಅದು ವಿದೇಶಿ ತಳಿಗಳ ಹಾಲು. ಇದು ಒಂದು ಸಣ್ಣ ವಿಚಾರವಾದರೂ ಪೂರ್ತಿ ವಿಷಯದ ಕುರಿತು ನಾವು ಅರಿಯುವುದು ಅವಶ್ಯವೇ ಆಗಿದೆ. 

ಏಕೆಂದರೆ ಪ್ರಕೃತಿ ಮತ್ತು ಗೋವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಹಾಗೂ ಅವುಗಳ ರಕ್ಷಣೆಯು ಮುಂದಿನ ಸ್ವಸ್ಥ ಮತ್ತು ಸ್ವಚ್ಛ ಭವಿಷ್ಯ ಗಳಿಗಾಗಿ ಕಾಪಾಡುವುದು ಕರ್ತವ್ಯವೇ ಆಗಿದೆ. 

ಹಾಗಾಗಿ ಕಾಲ ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತಿನಂತಾಗುವ ಮೊದಲೇ ನಾವು ಮಾಡುವ ಕೆಟ್ಟ ಕಾರ್ಯಗಳಿಂದ  ಕಾಲವೇ ಕಡಿವಾಣ ಹಾಕುವ ಮೊದಲು ಅರಿತು ಬಾಳುವುದು ಅನಿವಾರ್ಯವಾಗಿದೆ. 

ಬಂಗಾರದ ಗಣಿಯಾಗಿದ್ದ ಭಾರತವನ್ನು ಮತ್ತದೇ ಸ್ಥಿತಿಗೆ ಮರಳಿಸಲು ನಾವು ಅಣಿಯಾಗಿಬೇಕಿದೆ.

ಹಾಗಾಗಿ ದೇಶದ ಕೃಷಿಯ ಆಧಾರಸ್ತಂಭವಾದ ಗೋವುಗಳ ಹತ್ಯೆಯು  ರಾಷ್ಟ್ರದಲ್ಲಿ ಸಂಪೂರ್ಣ ನಿಷೇಧವಾಗಿ, ಯಾವ ಕಟುಕರ ಭಯವಿಲ್ಲದೇ ಸ್ವತಂತ್ರವಾಗಿ ಸುತ್ತಾಡಿ ಹುಲ್ಲನ್ನು ಮೇಯುವ ಭಾಗ್ಯದ ಬೆಳಕು ಗೋವುಗಳ ಬದುಕಿನಲ್ಲಿ ಉದಯಿಸುವುದೋ ಆಗ ಮಾತ್ರ ಭಾರತದ ಭಾಗ್ಯೋದಯವು ಸಾಧ್ಯ .

ಅವಕಾಶ ಸಿಕ್ಕಾಗ ಪ್ರತಿಯೊಂದರಲ್ಲೂ ಸ್ವಾರ್ಥವನ್ನೇ ಹುಡುಕುವ ಈ ಮನುಷ್ಯ .....ಜೀವನದಲ್ಲಿ ಸಾರ್ಥಕ್ಯವ ಪಡೆಯಲು ಇನ್ನಾದರೂ ನಿಸ್ವಾರ್ಥಿಯಾಗಿ ಜೀವನ ಸವೆಸುವ ಗೋಮಾತೆಗೆ ಕಷ್ಟವ ಕಳೆಯುವ ಸಾರಥಿಗಳಾಗೋಣ. 



✍️ ನೇತ್ರಾವತಿ ತೀರದಿಂದ.


ತೋಚಿದ್ದನ್ನು ಗೀಚಿದ್ದೇನೆ ಅಷ್ಟೇ. ಬರೆದಿರುವ ಅಕ್ಷರಗಳೆಲ್ಲವೂ ಗೋ ಮಾತೆಯ ಚರಣಗಳಿಗೆ ಅರ್ಪಿತ🙏😊.




#ವಂದೇ ಗೋಮಾತರಂ


#ಗಾವೋ ವಿಶ್ವಸ್ಯ ಮಾತರಃ


#ಜೈ ಗೋಮಾತ


#ಗೋವು ಉಳಿಯಲಿ - ಭಾರತ ಬೆಳಗಲಿ













Saturday, 15 August 2020

ಶ್ರೀರಾಮ ಮಂದಿರ ಕನಸು ❤️🚩

ಕಾತರಸಿ ಕಾಯುತಿದೆ ಕೋಟಿ ಕಣ್ಣುಗಳು

ಭವ್ಯ ಮಂದಿರದೊಳು ನಿನ್ನನು ಕಾಣಲು

ಫಲ-ಪುಷ್ಪ ಪೂಜಾರತಿಗಳು ಕಾದಿರೆ

ನಿನಗೆಂದೇ ಅರ್ಪಿಸಲು...

ಮನೆಮನೆಯಲೂ ಹಾರಲಿ ಕೇಸರಿ ದ್ವಜ 🚩

ಎಲ್ಲೆಡೆಯೂ ಮೊಳಗಲಿ ರಾಮನಾಮ ಜಯಘೋಷ

ಧರ್ಮ ಪುನಃಸ್ಥಾಪನೆಗೆ ನಾಂದಿಯಾಗಲಿರುವ ಈ ವರ್ಷ

ಹೊತ್ತು ತರಲಿದೆ ಭರತವರ್ಷಕ್ಕೆ ಹರುಷ 😃


✍️ ನೇತ್ರಾವತಿ ತೀರದಿಂದ.



#ಮಂದಿರವಲ್ಲೇ ಕಟ್ಟುವೆವು 😍🚩

#ಜೈ ಶ್ರೀ ರಾಮ್ 🙏🚩

#ಆಗಸ್ಟ್ 5 ,2020 ರಾಮ ಮಂದಿರ ಭೂಮಿ ಪೂಜಾ ❤️

#ಜೈ ಭವಾನಿ🚩

#ಶ್ರೀರಾಮ ಜಯ ರಾಮ ಜಯ ಜಯ ರಾಮ 😍🚩🙏💐


✍️ತೋಚಿದ್ದು.... ಗೀಚಿದ್ದು -8







 

ಕಳೆಯಿತು ಇಂದು ಒಂದು ವರುಷ ನಿನ್ನ ನೆನಪಿನಲ್ಲೇ.

ಕಳೆಯಿತು ಇಂದು ಒಂದು ವರುಷ ನಿನ್ನ ನೆನಪಿನಲ್ಲೇ. ಕಾರಣ ಕಣ್ಣ ಮುಂದೆ ನಡೆದು ಹೋಗುವ ಕೆಲವೊಂದು ಘಟನೆಗಳು ಅಚ್ಚಳಿಯದೆ ಉಳಿಯುವವು. ದೋಣಿಯ ಮೂಲಕ ಜೀವನ ಬಂಡಿಯನು ನಡೆಸುತ್ತಿದ್ದ ನಮ್ಮೂರಿಗೆ 2013ರಲ್ಲಿ ಪರಿಚಯವಾದ ಸ್ನೇಹಿತ ನೀನು.

ಬಹಳ ವರ್ಷಗಳ ಬಳಿಕ ಬದುಕಿನ ಒಡನಾಡಿಯಾಗಿ ಊರಿಗೆ ಬಂದ ನಿನ್ನನ್ನು ; ಕೆಲವು ಮನಸುಗಳ ಬಡಿದಾಟದಿಂದ ಸರಿಯಾಗಿ ಬರಮಾಡಿಕೊಳ್ಳಲು ಆಗಲೇ ಇಲ್ಲ. ಆದರೂ ನೀನು ಏಳು ವರ್ಷಗಳ ಕಾಲ ನಮ್ಮ ಬದುಕಿನ ಏಳುಬೀಳುಗಳಲ್ಲಿ ಒಡನಾಡಿಯಾಗಿ, ಪೆನ್ನು ಹಿಡಿದು ಕುಳಿತವಗೆ ಬರಹಗಳಿಗೆ ಸ್ಫೂರ್ತಿಯಾಗಿ, ವಿದ್ಯಾರ್ಥಿಗಳಿಗೆ ತಮ್ಮ ಕನಸಿನ ಆಗಸವನೇರಲಿರೋ ಮೆಟ್ಟಿಲಾಗಿ, ಪ್ರವಾಸಿಗರನು ಊರಿಗೆ ಕೈ ಬೀಸಿ ಕರೆದು ಅವರ ಪ್ರಯಾಸವನಿಳಿಸೋ ಮಿತ್ರನಾಗಿ, ಊರಿಗೆ ಸಂಪರ್ಕ ಸೇತುವೆಯಾಗಿ ಜೀವನಾಧಾರದ ವ್ಯವಸ್ಥೆಯಾದೆ. 

ಇಂದು ಮತ್ತದೇ ದಿನ ಮರಳಿ ಬಂದಿದೆ, ನಿನ್ನೊಂದಿಗೆ ಕಳೆದಿಹ ಮರೆಯಲಾಗದ ನೆನಪುಗಳು ಮರುಕಳಿಸುತ್ತಿವೆ. ಆ ದಿನವೇ ಆಗಸ್ಟ್ 09/08/2019 ಅಂದರೆ ಇಂದು. ಆಶ್ಲೇಷ ಮಹಾನಕ್ಷತ್ರ ಸಮಯದಲ್ಲಿ ಸುರಿದ ಭಾರೀ ಮಳೆಗೆ ಮನಸಿನಿಂದ ಮಾಸಲಾಗದಂತಹ ಘಟನೆ ನಡೆದು ಹೋಗಿ ಜೀವನಾಧಾರವಾಗಿದ್ದ ತೂಗುಸೇತುವೆಯ ಕೊಂಡಿಯು ಕಳಚಿಕೊಂಡಿತ್ತು . 

ಕೆಲವೊಂದು ಬಾರಿ ವಾಸ್ತವವಾಗಿ ಪರ್ಜನ್ಯ ನ ಕೋಪಕ್ಕೆ ತುತ್ತಾಗಿ ತೂಗುಸೇತುವೆಯನ್ನು ಕಳೆದುಕೊಂಡೆವು ಎನ್ನುವುದಕ್ಕಿಂತ ನಾವು ಮಾಡಿದ ಕೆಲಸದಿಂದಾಗಿ ಕಳೆದುಕೊಂಡಿದ್ದೇವೆ ಎಂದೆನಿಸುತ್ತದೆ(ಕಳೆದುಕೊಳ್ಳುತ್ತೇವೆ ಕೂಡ).

ಅದೇನೇ ಇರಲಿ ತುಂಬಿ ಹರಿವ ನೇತ್ರಾವತಿಯ ತೀರದಿ ಬದುಕನ್ನು ಕಟ್ಟಿಕೊಂಡಿರುವ ನಮ್ಮ ಊರಿಗೆ ನಿನ್ನೆ ಬಂದ 'ಸುದ್ದಿ'ಯಲ್ಲಿ ಮನಸದು ಹರುಷದಿ ತುಂಬಿದೆ. ಅದಕ್ಕೆ ಕಾರಣವೂ ನೀನೆ ಏಕೆಂದರೆ ನೀನು ಮತ್ತೆ ಮರಳಿ ಬರುತ್ತಿದ್ದೀಯ ❤️😍.

ವಿಷಾದವಿದೆ ಇಂದು ನಿನ್ನ ಕಳೆದು ಕೊಂಡ ದಿನವು ಹೌದು👍ಮತ್ತೆ ಜೀವನದಿ ಒಡನಾಡಿಯಾಗಿ ಹುಟ್ಟಿ ಬರುವೆ ಎಂದು ಸಿಹಿಸುದ್ದಿ ಕೇಳಿದ ದಿನವೂ ಹೌದು 😍.


 ✍️ನೇತ್ರಾವತಿ ತೀರದಿಂದ.


🤩 "ಮತ್ತೆ ನಾನು ಹುಟ್ಟಿ ಬರುವೆ  ಬದುಕಿನಲಿ ಹೊಸ ಭರವಸೆಗಳ ಹೊತ್ತು ತರುವೆ"🤩


✍️ಇಂತೀ ನಿಮ್ಮವನು


-ತೂಗುಸೇತುವೆ 😍





Monday, 29 June 2020

ಏನಾದರೂ ಮಾಡಿ ನಮ್ಮ ಊರನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ.

ಏನಾದರೂ ಮಾಡಿ ನಮ್ಮ ಊರನ್ನು 
ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ. 


ಏನಾದರೂ  ಮಾಡಿ ನಮ್ಮ ಊರನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ. ಅಗತ್ಯಕ್ಕೆ ತಕ್ಕಷ್ಟು ಸೌಲಭ್ಯ ನೀಡಿ ಸಾಕು. ಹಳ್ಳಿ ಹಳ್ಳಿಯಾಗಿದ್ದರೆ ಚಂದ❤️ ಪೇಟೆ ಪೇಟೆಯಾಗಿ ಇದ್ದರೆ ಅಂದ👍 ಅದರ ಅರ್ಥ ಅಭಿವೃದ್ಧಿ ಬೇಡ ಎಂದಲ್ಲ. ಆದರೆ ಅದಕ್ಕೊಂದು ಮಿತಿ ಇರಬೇಕು. ಪ್ರಕೃತಿಯ ಮೂಲ ಸ್ವರೂಪವನ್ನೇ ತೊಳೆದು ಹಾಕುವಂತಹ ಅಭಿವೃದ್ಧಿಯಾದಾಗ ಪ್ರಕೃತಿ ಖಂಡಿತವಾಗಿಯೂ ಒಂದಲ್ಲ ಒಂದು ದಿನ ತನ್ನ ಆಕ್ರೋಶವನ್ನು ಹೊರ ಹಾಕಿಯೇ ಹಾಕುತ್ತಾಳೆ.

ಇದಕ್ಕೆ ನೈಜ ಉದಾಹರಣೆ ಈಗ ಕಣ್ಣ ಮುಂದಿರುವ ಮದ್ದಿಲ್ಲದ ಕೊರೋನ. ಇನ್ನೊಂದು ತಾಜಾ ಉದಾಹರಣೆ ಹಿಂದೆಂದೂ ನಾವು ಕಂಡಿರದ ಕಳೆದ ವರ್ಷದ ನೇತ್ರಾವತಿಯ ನದಿಯ ಪ್ರವಾಹ (9/08/2019) .ಕಾರಣ ಹುಡುಕಿದರೆ ನದಿಯ ಈ ಪರಿ ಕ್ರೋಧಕ್ಕೆ ಅಂದು ನಾವೇ ಕಾರಣರು ಎಂದೆನಿಸುವುದು. ರಾಜಕಾರಣ ಏನೇ ಇರಲಿ ಆದರೆ ಪ್ರಕೃತಿಗೆ ಅದು ವಿಷಯವೇ ಅಲ್ಲ. ಅಂದು ಇದೇ ನೇತ್ರಾವತಿ ನದಿ ತಿರುವು ಯೋಜನೆ ಎಂದೇ ಕರೆಸಿಕೊಳ್ಳುವ ಎತ್ತಿನ ಹೊಳೆ ಯೋಜನೆಯನ್ನು ಸರ್ಕಾರ ಮಾಡುವಾಗ ದಕ್ಷಿಣ ಕನ್ನಡ ಜನರ "ಮೌನದ ಫಲವೇ" ಇಂದು ಅನುಭವಿಸುತ್ತಿದ್ದೇವೆ.
 ಸರ್ಕಾರ ಯಾವುದೇ ಇರಲಿ ಅದು ತಪ್ಪು ಮಾಡಿದಾಗ ಖಂಡಿಸುವ ಬುದ್ದಿ ನಮ್ಮಲಿರಬೇಕು. ಅದು ಬಿಟ್ಟು ಅದರ ಪಾಡಿಗೆ ಏನೋ ಮಾಡುತ್ತಿದೆ ನಮಗೇನು ಕಷ್ಟ ಬಂದಾಗ ನೋಡಿಕೊಳ್ಳೋಣ ಎಂದರೆ ಇದೇ ಆಗುವುದು. ಅಂದು ನೇತ್ರಾವತಿಯ ಒಡಲನ್ನು ,ಸುತ್ತಲಿನ ಬೆಟ್ಟ ಗುಡ್ಡಗಳನ್ನು ಅಗೆದು-ಬಗೆದು ಪ್ರಕೃತಿಮಾತೆಯ ಮೂಲಸ್ವರೂಪವನ್ನು ಛಿದ್ರಗೊಳಿಸಿದ ಪರಿಣಾಮ ಮಂಗಳೂರಿಗೆ ಮಂಗಳೂರೇ ಮುಳುಗಿ ಮುಗಿದು ಹೋಗುವುದರಲ್ಲಿತ್ತು ಆದರೆ ದೇವರ ದಯೆಯಿತ್ತು🙏 ಪ್ರಕೃತಿಗೆ ಮನುಜನ ಮೇಲೆ ಇನ್ನೂ ಕರುಣೆ ಉಳಿದಿತ್ತು 👍ಆದ ಕಾರಣ ಜೀವಗಳನು ಉಳಿಸಿತ್ತು.
ನಾನು ಯಾರ ಪರವೂ ಅಲ್ಲ ವಿರೋಧಿಯೂ ಅಲ್ಲ.
ಆದರೆ 24*7 ರಾಜಕೀಯವನ್ನು ಮಾಡುತ್ತಿರುವುದು, ಕೇಳಿದ್ದನ್ನು ಕೊಡದೆ; ಆಲೋಚಿಸದೆ ಮಾಡುವ ಕೆಲಸಗಳನ್ನು ನೋಡುತ್ತಿರುವ ನಾನು ಈ ಮಾತನ್ನು ಹೇಳಲೇಬೇಕು ಎಂದೆನಿಸಿ ಅಕ್ಷರಗಳಿಗಿಳಿಸಿರುವೆ.
ಇದುವರೆಗೂ ಇಲ್ಲಿ ಅಭಿವೃದ್ಧಿ ಬಿಡಿ ಸಂಪರ್ಕ ನೀಡುವ ಕೆಲಸ ಬಾಯಲ್ಲಿ ಮಾಡಿದ್ದೇ ಹೆಚ್ಚು. ಆದ ಕಾರಣ ಅಭಿವೃದ್ಧಿ ಹೆಚ್ಚಾದರೆ ಪ್ರಕೃತಿ-ಮನುಷ್ಯ ಇಬ್ಬರಿಗೂ ಹಾಳು. ಆದ್ದರಿಂದ ಹಾಸಿಗೆ ಇದ್ದಷ್ಟು ಕಾಲು ಚಾಚು👍ಕಡಿಮೆ ಖರ್ಚಿನಲ್ಲಿ ಗರಿಷ್ಠ ಅಭಿವೃದ್ಧಿ ಮಾಡು ಈ ಸೂತ್ರ ನಮ್ಮ ಊರ ಮತ್ತು ಊರ ಜನರ ಅಭಿವೃದ್ಧಿಗೆ ಸಾಕು.

ಪ್ರಕೃತಿಯನ್ನು ಅದರ ಪಾಡಿಗೆ ಬಿಟ್ಟು ಬಿಡಿ ಅವಳು ನಮ್ಮನ್ನು ಸದಾ ಕಾಯುವಳು. ಅಭಿವೃದ್ಧಿ ಮಾಡಿ ಅದು ತಪ್ಪಲ್ಲ. ಆದರೆ ಅವಳ ಸ್ವರೂಪವನ್ನು ಕುರೂಪಗೊಳಿಸದಿರಿ. ಹಾಗೆಯೇ ಊರಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ಮಾಡಿ ಆದರೆ ಊರು ಮುಂದೆ ಮುಳುಗದಿರಲಿ, ಕೃಷಿಗೆ ,ಊರಿನ ಜನ ಜೀವನಕ್ಕೆ ,ಊರನು ಕಾಯುವ ಶಕ್ತಿಗಳಿಗೆ ಅಡ್ಡಿಯಾಗಡಿರಲಿ ಅಷ್ಟೇ ನನ್ನ ಮಾತು.

ಇದು ನಮಗೆ ಪ್ರಕೃತಿ ನೀಡಿದ ಮತ್ತೊಂದು ಅವಕಾಶ 'ಹೇ ಮನುಜ ತಪ್ಪನ್ನು ತಿದ್ದಿಕೋ 'ಎಂದರೆ ತಪ್ಪಲ್ಲ.
ಪರಿವರ್ತನೆ ಜಗದ ನಿಯಮವೆಂಬ ವಾಕ್ಯವನ್ನು ನಾವರಿತುಕೊಳ್ಳೋಣ. ಬದಲಾಗೋಣ ಪ್ರಕೃತಿಯನ್ನು ಬದುಕಲು ಬಿಡೋಣ.... ಜೀವಗಳಿಗೆ ಜೀವನವನ್ನು ಕೊಡುವ ಆ ಜೀವಕ್ಕೂ ಜೀವವಿದೆ ಎಂಬುದನು ತಿಳಿಯೋಣ.


✍️ ನೇತ್ರಾವತಿ ತೀರದಿಂದ.

ಮತ್ತೆ ಮರಳಿ ಬರುವೆನೆಂಬ ಹೊಸ ಭರವಸೆಯಲಿ: ತೂಗುಸೇತುವೆ 😍❤️