'ಪುಸ್ತಕ'ವೆಂಬ ಮೂರಕ್ಷರದ ಸ್ನೇಹಿತ ....
ನಮಗೆ ಪುಸ್ತಕ ಎಂದಾಕ್ಷಣ ಮೊದಲು ನೆನಪಾಗೋದು ಬಿಳಿ ಹಾಳೆಮೇಲೆ ಬರೆದಿರುವ ಅಥವಾ ಅಚ್ಚೊತ್ತಿರುವ ದುಂಡಾಕಾರದ ಗುಂಡು -ಗುಂಡು ,ಪುಟ್ಟ ಪುಟ್ಟ ಅಕ್ಷರಗಳು. ಇದೇನಿದೂ ???... ಇವ್ಳು ಪುಸ್ತಕ, ಅಕ್ಷರ , ಸ್ನೇಹಿತ ಅಂತೆಲ್ಲ ಮಾತಾಡ್ತಿದಾಳೆ ಅಂದ್ಕೊಂಡ್ರಾ ....! ಹ್ಮ್ ಹೌದು ; ಇಂದು ನಾ ಹೀಗೆ ಕೂತಿರಬೇಕಾದ್ರೆ; ನಮ್ಮ ಫ್ರೆಂಡ್ಸ್ ಎಲ್ಲಾ ನೆನಪಾದ್ರೂ ... ಹಾಗೆ ಯೋಚಿಸ್ತಾ ಜೀವನದಲ್ಲಿ ಸದಾ ಕಾಲ ಸ್ನೇಹಿತನಾಗಬಲ್ಲವರು ಯಾರು? /ಸ್ನೇಹಿತನಂತೆ /ನಷ್ಟೇ ಪಾತ್ರ ವಹಿಸುವ ವಿಷಯ ಯಾವುದೆಂದು ಆಲೋಚಿಸಬೇಕಾದರೆ ; ತಕ್ಷಣ ದೃಷ್ಟಿಯು ಚಲಿಸಿದ್ದು ; ಅಲ್ಲೇ ಮೇಜಿನಲ್ಲಿ ಹಾಯಾಗಿ ಇದ್ದ ಪುಸ್ತಕದ ಮೇಲೆ. ಕೂಡಲೇ ನರಮಂಡಲಗಳ ಸೂಚನೆಗಳ ಮೇರೆಗೆ ಕೈಗೆ ಬಂದ ಲೇಖನಿಯು ಪುಸ್ತಕ ವಿಷ್ಯದ ಬಗ್ಗೆ ಗೀಚಲು ಹೊರಟಿತು.
ಜ್ಜ್ಞಾನವೆಂಬ ಹಸಿವು ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬ ಮನುಷ್ಯನಲ್ಲಿ ಇರಬೇಕಾದ ಒಂದು ಅಂಶ. ನಮ್ಮ ಜ್ಞಾನದ ದಾಹವನ್ನು ನೀಗಿಸೋದೇ ಪುಸ್ತಕ ಎಂದರೆ ತಪ್ಪಾಗಲಾರದು . ಪುಸ್ತಕವೆಂಬುದು ಕೇವಲ ಪುಸ್ತಕವಲ್ಲ. ಅದು ಬದುಕೆಂಬ ಮೂರಕ್ಷರದ ಹಾದಿಯನ್ನೇ ಬದಲಾಯಿಸಬಲ್ಲ ಸಾಮರ್ಥ್ಯವಿದೆ.ಹಾಗಂದುಕೊಂಡು ಹೇಳುತ್ತಾ ಹೋಗುವುದಾದರೆ ಬಾಳಿನಲ್ಲಿ ಮೂರಂಕಿಗಳದ್ದೇ ಕಾರುಬಾರು.ಜನನ, ಎಳೆಯ , ಶಿಕ್ಷಣ , ಯೌವನ ,ಜೀವನ ... ಕೊನೆಗೆ ಮರಣ . ಇದೇ ರೀತಿ ಮುಂದುವರೆಸುತ್ತಾ ಹೋದರೆ ಪಟ್ಟಿ ಬಾಲದಂತೆ ಬೆಳೆಯುತ್ತಾ ಸಾಗುವುದು ಖಚಿತ. ಅದರ ಬಗ್ಗೆ ಇನ್ನೊಮ್ಮೆ ಬರೆದರಾಯಿತು ಬಿಡಿ...
ತಾನು ಒಬ್ಬಂಟಿಯೆಂದು ಕುಳಿತವರಿಂದ ಹಿಡಿದು ತನ್ನ ವೃದ್ದಾಪ್ಯದ ಸಮಯ ಕಳೆಯುವ ಸಂಗಾತಿಯಾಗಿ , ಜೊತೆ ಇದ್ದು ; ಒಬ್ಬ ವಿದ್ಯಾರ್ಥಿಯ ಉತ್ತಮ ಸ್ನೇಹಿತ /ತೆ ಯಾಗಿರುವುದು. ನಮ್ಮ ಬಾಳಿನಲ್ಲಿ ಬಂದು ನಾವು ಅತ್ತಾಗ , ಮನವು ಬೇಸರಿಸಿದಾಗ ಮನಸಿಗೆ ಸಮಾಧಾನವನು ಹೇಳಿ ; ಪುನಃ ಬದುಕನ್ನು ಹಸನುಗೊಳಿಸುವ ಕೆಲಸವನ್ನು ಆಪ್ತನಾಗಿ ಬಂದು ಕೂಡಿ ಮಾಡಿ ಮುಗಿಸುವುದು.
ನಮಗರಿವಿರದ ಅನಾಮಿಕ ವಿಷಯ/ವಿಚಾರಗಳ ತಿಳುವಳಿಕೆ ಹಾಗೂ ಎಷ್ಟೋ ಘಟನೆಗಳ ಅಸ್ತಿತ್ವಕ್ಕೆ ಕುತೂಹಲವೆಂಬ ಮರದ ಬೀಜವ ಬಿತ್ತಿ ಅದೇ ಗುಂಗಿನಲ್ಲಿರುವಂತೆಯೂ ಮಾಡುವುದು . ಮನುಜನ ಹೃದಯಾಂತರಾಳದಲ್ಲಿ ದೇಶ ಭಕ್ತಿಯೆಂಬ ದೀಪವನು ಹಚ್ಚಿ , ನಮ್ಮೀ ಭಾಷಾ -ಸಾಹಿತ್ಯಗಳ ಬಗೆಗಿನ ಆಸಕ್ತಿಯೆಂಬ ತೈಲವು ಒಸರುವಂತೆ ಮಾಡಿ;ಬದುಕಿನ ಜೊತೆ ಬೆರೆಸುವುದು.
ಒಬ್ಬ ಮನುಷ್ಯನ ಜೀವಕ್ಕೆ ಅರ್ಥವನ್ನು ಕಟ್ಟಿಕೊಟ್ಟು ; ಜೀವಾತ್ಮದ ಪರಮೋನ್ನತಿಗೆ ಕಾರಣವಾಗುವ ಹೊತ್ತಗೆ ಎಂದು ಕರೆಯಲ್ಪಡುವ ಪುಸ್ತಕವು ಖಂಡಿತವಾಗಿಯೂ ಒಬ್ಬ ಉತ್ತಮ ಸ್ನೇಹಿತನಾಗುವುದು ಅಲ್ಲವೇ...!!!!???
ವಿಧಾತ್ರೀ .ಪಿ. ಎಸ್ .